Sunday 23 September, 2012

ದೀಪಿಕಾ ಪಡುಕೋಣೆ ಸಂಪರ್ಕಿಸಿಲ್ಲ ಎಂದ ಉಪೇಂದ್ರ


ಕನ್ನಡದ ಸೂಪರ್ ಸ್ಟಾರ್ ಉಪೇಂದ್ರ ತಮ್ಮ ಬರಲಿರುವ ಚಿತ್ರಕ್ಕಾಗಿ ದೀಪಿಕಾ ಪಡುಕೋಣೆ ಅವರನ್ನು ಸಂಪರ್ಕಿಸಿದ್ದಾರೆ ಎಂಬ ಸುದ್ದಿ ಗಾಂಧಿನಗರದ ತುಂಬಾ ಓಡಾಡುತ್ತಿತ್ತು. ಆದರೆ ಅದು ಸುಳ್ಳು, ತಾವು ದೀಪಿಕಾರನ್ನು ಸಂಪರ್ಕಿಸಿಲ್ಲ ಎಂದು ಸ್ಪಷ್ಟಪಡಿಸಿರುವ ಉಪೇಂದ್ರ ಈ ಸುದ್ದಿಗೆ ತೆರೆ ಎಳೆದಿದ್ದಾರೆ. ಅಲ್ಲಿಗೆ, ಕನ್ನಡದ 'ಐಶ್ವರ್ಯಾ' ಚಿತ್ರದ ಮೂಲಕ ಕೆರಿಯರ್ ಆರಂಭಿಸಿ ಈಗ ಬಾಲಿವುಡ್ ಬಹುಬೇಡಿಕೆ ತಾರೆಯಾಗಿರುವ ದೀಪಿಕಾ ಮತ್ತೆ ಕನ್ನಡಕ್ಕೆ ಬರುವ ಸುದ್ದಿಗೆ ತಾತ್ಕಾಲಿಕ ತಡೆ ಬಿದ್ದಂತಾಗಿದೆ.
ತಮ್ಮ ಸೌಂದರ್ಯದ ಮೂಲಕ ಕನ್ನಡ ಪ್ರೇಕ್ಷಕರಿಗೆ ಮೋಡಿ ಮಾಡಿದ್ದ ದೀಪಿಕಾ ಪಡುಕೋಣೆ, ನಂತರ ಬಾಲಿವುಡ್ ಕಡೆ ಮುಖ ಮಾಡಿ ಅಚ್ಚರಿ ಮೂಡಿಸುವಷ್ಟರ ಮಟ್ಟಿಗೆ ಅಲ್ಲಿ ಬೆಳೆದಿದ್ದಾರೆ. ಆದರೂ ತಮ್ಮ ಮೊದಲ ಚಿತ್ರದ ನಾಯಕ ನಟ ಉಪೇಂದ್ರ ಮೇಲೆ ದೀಪಿಕಾ ಗೌರವ ಸ್ವಲ್ಪವೂ ಕಡಿಮೆಯಾಗಿಲ್ಲ ಎನ್ನಲಾಗುತ್ತಿದೆ.
ಸುದ್ದಿಮೂಲಗಳ ಪ್ರಕಾರ, ಉಪೇಂದ್ರ ಹುಟ್ಟುಹಬ್ಬದ ದಿನ (ಸೆಪ್ಟೆಂಬರ್ 18) ಘೋಷಣೆಯಾಗಿರುವ ಉಪೇಂದ್ರ ನಿರ್ದೇಶನದ ಹೊಸ ಚಿತ್ರ 'ಉಪೇಂದ್ರ- 2' ನಾಯಕಿಯಾಗಿ ದೀಪಿಕಾ ಪಡುಕೋಣೆ ಆಯ್ಕೆ ನಡೆದಿದೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಸ್ವತಃ ಉಪ್ಪಿ "ದೀಪಿಕಾ ಸಂಪರ್ಕಿಸುವ ಕುರಿತು ಯಾವುದೇ ಪ್ರಯತ್ನವೂ ನನ್ನಿಂದ ನಡೆದಿಲ್ಲ. ಅಷ್ಟಕ್ಕೂ, ಇನ್ನೂ ನನ್ನ ಹೊಸ ಚಿತ್ರದ ಕೆಲಸ ಪೂರ್ಣಗೊಂಡಿಲ್ಲ. ಯಾವುದೇ ಕಲಾವಿದರ ಆಯ್ಕೆ ನಡೆದಿಲ್ಲ. ಆದರೆ ಹೊಸಬರು ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಬರುತ್ತಾರೆ ಎಂದು ಈಗಲೇ ಹೇಳಬಲ್ಲೆ" ಎಂದಿದ್ದಾರೆ ಉಪೇಂದ್ರ.
ಹೊಸ ಚಿತ್ರಕ್ಕೆ ಉಪೇಂದ್ರ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಈ ಚಿತ್ರಕ್ಕೆ ಸಂಗೀತ ಗುರುಕಿರಣ್ ಅವರದು. ಛಾಯಾಗ್ರಾಹಕರಾಗಿ ವೇಣು ಆಯ್ಕೆ ನಡೆದಿದೆ ಎಂಬ ಸಮಾಚಾರ ಬಿಟ್ಟರೆ ಮಿಕ್ಕಿದ್ದು ಸದ್ಯಕ್ಕೆ ಸಸ್ಪೆನ್ಸ್! ಚಿತ್ರದ ಶಿರ್ಷಿಕೆ ಬಗ್ಗೆ 'ಸೂಪರ್ ಚಿತ್ರದಂತೆ 'ಹುಳ' ಬಿಟ್ಟಿದ್ದಾರೆ ನಿರ್ದೇಶಕರು. ಉಪ್ಪಿ ಈಗ ಬಿಜಿಯಾಗಿರುವುದರಿಂದ ಮುಂದಿನ ತಿಂಗಳು ಈ ಚಿತ್ರ ಸೆಟ್ಟೇರುವ ಸಾಧ್ಯತೆಯಿದೆ. 


No comments:

Post a Comment