Friday 10 August, 2012

ಕಥೆ-ಚಿತ್ರಕಥೆ ಉಪ್ಪಿಯದ್ದೇ, 'ಟೋಪಿವಾಲ' ಮಾತ್ರ ಶ್ರೀನಿ!


ಕಥೆ, ಚಿತ್ರಕಥೆ ಬರೆದಿರುವುದು ಉಪೇಂದ್ರ, ನಾಯಕನೂ ಉಪೇಂದ್ರ. ಸಂಭಾಷಣೆ ಮತ್ತು ನಿರ್ದೇಶನ ರೇಡಿಯೋ ಜಾಕಿ ಶ್ರೀನಿಯವರದ್ದು! ಕಥೆ-ಚಿತ್ರಕಥೆ ಬರೆದ ಉಪ್ಪಿ ನಿರ್ದೇಶಕನ ಟೋಪಿಯನ್ನು ಯಾಕೆ ಶ್ರೀನಿ ಮೇಲಿಟ್ಟರು? ಇದು 'ಟೋಪಿವಾಲ' ಚಿತ್ರದ ಬಗ್ಗೆ ಕೇಳಿ ಬರುತ್ತಿರುವ ಪ್ರಶ್ನೆ.

ಇಷ್ಟು ಕೆಲಸ ಮಾಡಿ, ಬೇರೆಯವರಿಗೆ ಚಿತ್ರ ಒಪ್ಪಿಸುತ್ತಿರುವುದು ಉಪೇಂದ್ರ ಇದೇ ಮೊದಲಲ್ಲ. ಎಚ್2ಒ, ಸೂಪರ್ ಸ್ಟಾರ್, ಹಾಲಿವುಡ್, ರಕ್ತಕಣ್ಣೀರು, ಬುದ್ಧಿವಂತ ಚಿತ್ರಗಳಲ್ಲೂ ಹೀಗೆಯೇ ಕೈಯಾಡಿಸಿದ ನಂತರ ನಿರ್ದೇಶನಕ ಟೋಪಿಯನ್ನು ಬೇರೆಯವರ ತಲೆಗಿಟ್ಟು ಜಾಣತನ ಮೆರೆದಿದ್ದರು ಉಪ್ಪಿ. ಚಿತ್ರಗಳು  ಗೆದ್ದಾಗ ಕ್ರೆಡಿಟ್ ರಿಯಲ್ ಸ್ಟಾರ್ ಮಡಿಲಿಗೆ ಅಲಿಖಿತವಾಗಿ ಬೀಳುತ್ತಿತ್ತು!

ಈ ಬಾರಿ ನಿಜಕ್ಕೂ ಶ್ರೀನಿ ಸ್ವತಂತ್ರವಾಗಿ ನಿರ್ದೇಶಿಸಿದ್ದಾರೆಯೇ ಅಥವಾ ಶ್ರೀನಿ ಹೆಸರಿನಲ್ಲಿ ಉಪೇಂದ್ರರೇ ತಲೆ ಓಡಿಸಿದ್ದಾರೆಯೇ ಅನ್ನೋದು ಇನ್ನೂ ಗೊತ್ತಾಗಿಲ್ಲ.

ಬಿಡಿ, 'ಟೋಪಿವಾಲ' ಚಿತ್ರದ ಚಿತ್ರೀಕರಣ ಈಗ ಬಹುತೇಕ ಮುಗಿದಿದೆಯಂತೆ. ಆರ್. ಶ್ರೀನಿವಾಸ್ ಮತ್ತು ಕೆ.ಪಿ. ಶ್ರೀಕಾಂತ್ ನಿರ್ಮಾಣದ ಚಿತ್ರವಿದು. ಇನ್ನುಳಿದಿರುವುದು ಕ್ಲೈಮ್ಯಾಕ್ಸ್, ನಾಲ್ಕು ಹಾಡುಗಳು ಮತ್ತು ಸಣ್ಣಪುಟ್ಟ ಮಾತಿನ ಚಿತ್ರೀಕರಣ ಮಾತ್ರ. ಬೆಂಗಳೂರಿನಲ್ಲೇ 'ಟೋಪಿವಾಲ' ಟೀಮ್ ಸುಮಾರು 40 ದಿನಗಳ ಕಾಲ ಚಿತ್ರೀಕರಣ ನಡೆಸಿದೆ.

ಈಗ ಬಾಕಿ ಉಳಿದಿರುವ ಹಾಡುಗಳನ್ನು ಬೆಂಗಳೂರು, ಮಂಗಳೂರು, ಪಾಂಡಿಚೇರಿ ಮತ್ತು ಸ್ವಿಜರ್ಲೆಂಡ್‌ಗಳಲ್ಲಿ ಇದೇ ತಿಂಗಳು ಚಿತ್ರೀಕರಣ ಮಾಡಲಾಗುತ್ತಿದೆ.

'ಟೋಪಿವಾಲ'ನಿಗೆ ಮಲಯಾಳಂ ಬೆಡಗಿ ಭಾವನಾ ನಾಯಕಿ. ಉಳಿದಂತೆ ರಂಗಾಯಣ ರಘು, ರವಿಶಂಕರ್, ರಾಜು ತಾಳಿಕೋಟೆ, ರಾಕ್‌ಲೈನ್ ಸುಧಾಕರ್, ಬಿರಾದಾರ್, ಮೈತ್ರೇಯ ಮುಂತಾದವರ ತಾರಾಗಣವಿದೆ.

ವಿ. ಹರಿಕೃಷ್ಣ ಸಂಗೀತ, ಶ್ರೀಷ ಛಾಯಾಗ್ರಹಣ, ರವಿ ವರ್ಮಾ- ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಮಾಡುತ್ತಿದ್ದಾರೆ.



No comments:

Post a Comment